Thursday, 29 October 2015

POEM - 76 - ನೇಹ

ನೇಹ
ಬರುವಾಗ ಒಬ್ಬರೇ
ಹೋಗುವಾಗಲೂ ಒಬ್ಬರೇ
ಮಧ್ಯದಲಿ ಬೆಳೆಯುವ
ಮನಸ್ಸನ್ನು ಆವರಿಸುವ
ಬಾಂಧವ್ಯಗಳು, ನಂಟುಗಳು
ಸಂಬಂಧಗಳು, ಸ್ನೇಹಗಳು
ಬದುಕಲು ಪ್ರೇರಕ
ಸಂತೋಷಕೆ ಪೂರಕ.
ಜೀವನದಿ ಸೋತಾಗ
ಬೇಕು ಬಾಳಿಗೆ ಸ್ನೇಹ
ಮನ ಹತಾಶೆಗೊಂಡಾಗ
ಬೇಕು ಬೆನ್ತಟ್ಟುವ ಗೆಳೆತನ
ಕಷ್ಟಗಳು ಬಂದಾಗ
ಬೇಕು ಬಾಂಧವ್ಯಗಳು
ನೋವು ಮನೆಮಾಡಿದಾಗ
ಬೇಕು ಸಿಹಿಸಂಬಂಧಗಳು.
ಬದುಕಿನಲಿ ಅವಶ್ಯವೆಲ್ಲರೂ
ಅನಿವಾರ್ಯವಲ್ಲ ಯಾರೂ,
ಯಾರೋ ಇಲ್ಲದಿದ್ದರೆ 
ಬಾಳು ಬಡವಾಗಬಹುದು
ಮುಕ್ತಾಯವಾಗುವುದೇ ? 
ಯಾರೋ ಮರೆಯಾದರೆ
ಬದುಕು ಕಹಿಯಾಗಬಹುದು
ಕೊನೆಯಾಗುವುದೇ?
ಕೊನೆವರೆಗೂ ಬರುವ
ಸ್ನೇಹಗಳು ಎಷ್ಟೋ?
ಕಡೆವರೆಗೆ ಬರುವ
ಸಂಬಂಧಗಳೆಷ್ಟೋ?
ಉಸಿರಿರುವತನಕ
ಉಸಿರಾಗುವವರೆಷ್ಟೋ!
ಬಾಳಹಾದಿಯನು
ಹಸಿರಾಗಿಸುವವರೆಷ್ಟೋ!

POEM 75 - ಉಸಿರಾದ ಜೀವ

ಉಸಿರಾದ ಜೀವ
ಎದೆಯಾಳದಲಿ ಬಚ್ಚಿಟ್ಟ 
ನೋವುಗಳ ಬಯಲಾಗಿಸಲಾದರೆ 
ಮನದೊಳಗೆ  ಅಡಗಿಸಿಟ್ಟ
ವ್ಯಥೆಗಳ ಹೊರತೆಗೆಯಲಾದರೆ 
ಹೃದಯಾಂತರಾಳದಲಿ ಹುಗಿದಿಟ್ಟ
ಕಥೆಗಳ ಬಹಿರಂಗಗೊಳಿಸಲಾದರೆ
ನೋವು ಮರೆಯಾಗದೇ?
ಮನ ಹಗುರಾಗದೇ?
ಬಚ್ಚಿಟ್ಟ ಭಾವಗಳ
ಮುಚ್ಚಿಟ್ಟ ನೋವುಗಳ
ಬೈತಿಟ್ಟ ಕಥೆಗಳ
ಅವಿಸಿಟ್ಟ ವ್ಯಥೆಗಳ
ಹೇಳಲು ಧೈರ್ಯ ಬೇಕು
ಹೊರಬರಲು ಕೆಚ್ಚಿರಬೇಕು.
ಆದರೆ
ಅಗ್ನಿಪರ್ವತದಂತೆ ಸಿಡಿದು
ಹೊರಬರುವ ಲಾವಾರಸವ
ತಡೆಯುವ, ತಂಪನೆರೆಯುವ
ಹೃದಯವಂತ ಜೀವ ಬೇಕು.
ಒಡ್ಡುಗಳೆಲ್ಲವ ಒಡೆದು
ಭೋರ್ಗರೆಯುವ ಜಲರಾಶಿಯ
ಹಿಡಿಯುವ, ತಡೆಯೊಡ್ಡುವ
ಸಿರಿವಂತ ಹೃದಯ ಬೇಕು.
ಅಡೆತಡೆಗಳೆಲ್ಲವ ಮೀರಿ
ದಹಿಸುವ ಕಾಡ್ಗಿಚ್ಚನು
ನಿಲಿಸುವ, ಶಮನಗೊಳಿಸುವ
ಭಾವನಾತ್ಮಕ ಮನವು ಬೇಕು.
ಆ ಜೀವವೊಂದು ದೊರೆತಾಗ
ಬೆಂಬಲಕೆ ನಿಲುವಾಗ
ನೋವನ್ನು ನೀಗುವಾಗ 
ನಲಿವನ್ನು ನೀಡುವಾಗ
ಕಂಬನಿಯ ಒರೆಸುವಾಗ
ಸಂತಸವ ಸುರಿಸುವಾಗ
ವ್ಯಥೆಯನ್ನು ಮರೆಸುವಾಗ
ನೆಮ್ಮದಿಯ ಹರಿಸುವಾಗ
ಬದುಕಾಗದೇ ಸುಂದರ?
ಬಾಳಾಗದೇ ಬಂಧುರ?
ಜೇನಾಗದೇ ಜೀವನ?
ಸಿಹಿಯಾಗದೇ ಭಾವನ?
ಹಳತಾಗದೇ ಗೋಳು?
ಬೆಳಕಾಗದೇ ಬಾಳು?
ಮರೆಯಾಗದೇ ನೋವು?
ಉಸಿರಾಗದೆ ಆ ಜೀವವು?

POEM 74 - ವಿಶ್ವ ಸ್ನೇಹದ ದಿನ

ವಿಶ್ವ ಸ್ನೇಹದ ದಿನ

ಗೆದ್ದಾಗ ಆರತಿಯನೆತ್ತುವ
ಬಿದ್ದಾಗ ಬೆಂಬಲ ನೀಡುವ
ನಲಿವಲ್ಲಿ ಜೊತೆಗೂಡುವ
ನೋವಲ್ಲಿ ಕಂಬನಿ ಮಿಡಿಯುವ
ಸುಖದಲ್ಲಿ ಸಂತಸ ಪಡುವ
ಕಷ್ಟದಲಿ ಕೈ ಹಿಡಿಯುವ
ಉತ್ಸಾಹದಲಿ ಬೆನ್ತಟ್ಟುವ
ನಿರಾಶೆಯಲಿ ನೆರಳಾಗಿ ನಿಲ್ಲುವ
ಬೆಳಕಲ್ಲಿ ನಡೆಯಲು ಪ್ರೇರೇಪಿಸುವ
ಕತ್ತಲಲಿ ದೀಪವನು ಹಚ್ಚುವ
ಆರಕ್ಕೇರಿದಾಗ ಕರುಬದ
ಮೂರಕ್ಕಿಳಿದಾಗ ಕೈಬಿಡದ
ಅಪರೂಪದ ನೇಹ ನಮದಾಗಲೆಂದು
ಅಂತಹ ನೇಹಿಗರು ನಮಗಿರಲೆಂದು
ಆಶಿಸುವೆ ಈ ದಿನ
ವಿಶ್ವ ಸ್ನೇಹದ ದಿನ

POEM - 73 - ಸಂಬಂಧಗಳು

ಸಂಬಂಧಗಳು
ಒತ್ತಾಯದಿಂದ
ಸ್ನೇಹ ಬೆಳೆಯುವುದೇ?
ಬಲವಂತದಿಂದ 
ಮಮಕಾರ ಹುಟ್ಟುವುದೇ? 
ಒತ್ತಡದಿಂದ
ಪ್ರೀತಿ ಉಂಟಾಗುವುದೇ? 
ಆಗ್ರಹದಿಂದ
ಸಂಬಂಧ ಉತ್ತಮವಾಗುವುದೇ?
ಸ್ನೇಹ ಬೆಳೆಯಲು
ಬೇಕು ವಿಶ್ವಾಸ 
ಮಮತೆ ಹುಟ್ಟಲು
ಬೇಕು ಮಾನವತೆ
ಪ್ರೀತಿ ಉಂಟಾಗಲು
ಬೇಕು ಸಂಸ್ಕೃತಿ
ಸಂಬಂಧ ಸದೃಢವಾಗಲು
ಬೇಕು ಸ್ವಾತಂತ್ರ್ಯ .

POEM - 72 - ನೋಯದಿರು ಕಂದ


ನೋಯದಿರು ಕಂದ
ಯಾರದೋ ತಪ್ಪಿಗೆ
ನೀ ನೋಯುವುದೇಕೆ ಕಂದ?
ಯಾರದೋ ದೂಷಣೆಗೆ
ನೀ ಬೇಯುವುದೇಕೆ ಕಂದ?
ಉಪಕಾರವ ಸ್ಮರಿಸದಿಹ
ಜನರಿರುವರು
ಮಾಡಿದ್ದನ್ನು ಮರೆಯುವ
ಮನುಜರಿರುವರು
ಚುಚ್ವುನುಡಿಗಳಾಡುವ
ಮಂದಿಯಿರುವರು
ಬಿರುನುಡಿಗಳಾಡುವ
ಕಟುಕರಿರುವರು
ಸರಿಯೆನಿಸಿದರೆ ನಿನ್ನ ವರ್ತನೆ 
ಎದ್ದು ನಿಲ್ಲು ಅದಕಾಗಿ 
ಸತ್ಯವೆನಿಸಿದರೆ ನಿನ್ನ ಚಿಂತನೆ
ಹೋರಾಡು ನೀ ಏಕಾಂಗಿ
ಸತ್ಯವಿದೆ ನಿನ್ನ ಮನದಲ್ಲಿ
ನಗುವು ಇದೆ ಮುಖದಲ್ಲಿ
ದೃಢತೆ ಇದೆ ಮಾತಿನಲ್ಲಿ
ಸಂಕಲ್ಪವಿದೆ ನಡೆಯಲ್ಲಿ
ಬೇಕಿದೆ ಇನ್ನೇನು ಕಂದ
ನಡೆ  ನೀ ನೆಮ್ಮದಿಯಿಂದ. 

POEM 71 - ಸ್ವಾತಂತ್ರ್ಯೋತ್ಸವ

ಸ್ವಾತಂತ್ರ್ಯೋತ್ಸವ

ಒಂದು ದಿನ ಧ್ವಜವ
ಏರಿಸಿದರೆ ಸಾಕೆ?
ಇದೊಂದು ದಿನ ದೇಶವ
ಹಾಡಿ ಹೊಗಳಿದರೆ ಸಾಕೆ?
ಎಲ್ಲೆಲ್ಲೂ ತಳಿರುತೋರಣ
ಹಬ್ಬದ ವಾತಾವರಣ
ಬಾವುಟಗಳ ರಾರಾಜಿಸುವಿಕೆ
ಬಣ್ಣದ ಬಟ್ಟೆಗಳ ತೊಡುವಿಕೆ
ಸಿಹಿತಿಂಡಿಗಳ ಹಂಚಿಕೆ
ಭಾಷಣಗಳ ವಾಚಿಕೆ
ಮಕ್ಕಳ ನಾಟಕ ನೃತ್ಯಗಳು
ವಿದ್ಯಾರ್ಥಿಗಳ ಪೆರೇಡ್ ಗಳು
ಶಾಲೆಗೆ ರಜ
ಒಂದಷ್ಟು ಮಜ
ಸ್ವಾತಂತ್ರ್ಯೋತ್ಸವವೆಂದರೆ ಹೀಗೇನಾ?
ಲಕ್ಷಾಂತರ ಜನರ ತ್ಯಾಗಬಲಿದಾನದ
ಸ್ವಾತಂತ್ರ್ಯದಿನದಾಚರಣೆ ಇಷ್ಟೇನಾ?
ದಾಸ್ಯವಿರದ, ದಮನವಿರದ
ಹೀನ ಅಪಮಾನವಿರದ
ನೋವಿರದ, ಕಣ್ಣೀರಿರದ
ಜಾತಿಧರ್ಮ ಭೇದವಿರದ
ಸ್ವಾತಂತ್ರ್ಯ, ಸಮಾನತೆಯ
ಉದ್ಯೋಗ, ಸಾಕ್ಷರತೆಯ
ಸಮೃದ್ಧಿ , ಏಕತೆಯ
ನೆಮ್ಮದಿ, ಸೌಹಾರ್ದತೆಯ
ಹೊಸನಾಡಿನ ಕನಸ ಕಂಡರು
ಭವ್ಯಭಾರತದ ಆಶೆ ಹೊತ್ತರು
ನಮ್ಮ ಮಕ್ಕಳ ಓದಿಗಾಗಿ 
ಅವರು ಓದು ಬಿಟ್ಟರು
ನಮ್ಮ ಮುಕ್ತ ಬದುಕಿಗಾಗಿ
ಅವರು  ಕೆಲಸ ಬಿಟ್ಟರು
ನಮ್ಮ ಸ್ವಾತಂತ್ರ್ಯಕಾಗಿ
ಅವರು ಪ್ರಾಣ ಕೊಟ್ಟರು
ಹೊಸ ದೇಶದ ಕನಸಿಗಾಗಿ
ತಮ್ಮ ಕನಸ ಬಲಿಯಿತ್ತರು
ನಮ್ಮಯ ಸುಖಬಾಳಿಗಾಗಿ
ತನುಮನಧನ ತೆತ್ತುಬಿಟ್ಟರು
ಮನೆಮಠ ಆಸ್ತಿಪಾಸ್ತಿ
ಕಳೆದುಕೊಂಡರು 
ಲಾಠಿಏಟು ಗುಂಡಿನೇಟು
ಸಹಿಸಿಕೊಂಡರು
ಜೈಲು ಶಿಕ್ಷೆ ಗಡೀಪಾರು ಶಿಕ್ಷೆ,
ಅನುಭವಿಸಿಬಿಟ್ಟರು
ದಮನದೌರ್ಜನ್ಯಗಳ
ಎದುರಿಸಿಬಿಟ್ಟರು
ನೇಣುಗಂಬವನ್ನು ಸಹ
ನಗುತ ಏರಿಬಿಟ್ಟರು
ತಾವ್ ಕಂಡ ಕನಸಿಗಾಗಿ
ಕನಸಾಗಿ ಹೋದರು.
ಅವರ ಕನಸ ಸಾಕಾರಗೊಳಿಸುವುದೇ
ಅವರಿಗೆ ನಾವ್ ನೀಡುವ ನಿಜಗೌರವ
ಹೊಸ ನಾಡ ಕಟ್ಟಲು ಪಣತೊಡುವುದೇ
ನಿಜವಾದ ರೀತಿಯ ಸ್ವಾತಂತ್ರ್ಯೋತ್ಸವ.

POEM - 70 - ಒಂದು ಹೆಣ್ಣಿನ ವ್ಯಥೆ

ಒಂದು ಹೆಣ್ಣಿನ ವ್ಯಥೆ
ಮುಚ್ಚುಮರೆಯಿಲ್ಲದೆ
ಎಲ್ಲವನು ಬಿಚ್ಚಿಟ್ಟ ಮೇಲೇಯೂ 
ನನ್ನ ಮೇಲೆಯೇ ಸಂದೇಹವೇಕೆ?
ಈ ಅನುಮಾನಗಳೇಕೆ?
ಹೃದಯ  ಹಿಂಡುವಂತಹ
ನೋವುಗಳು ಮಿಥ್ಯವೇ?
ಅನುಭವಿಸಿದಂತಹ
ವೇದನೆ ಅಸತ್ಯವೇ?
ಮನಕೆ ಕೊಳ್ಳಿಯಿಟ್ಟಂತಹ 
ಸಂಕಟಗಳು ಅಸಹಜವೇ?
ಪ್ರಶ್ನೆಗಳು ಮೂಡಿದ್ದಾದರೂ
ಹೇಗೆ? ಏಕೆ?
ಚಿಕ್ಕಂದಿನಲಿ ಓದಿದ
ಅಜ್ಜಿ ವೇಷ ಧರಿಸಿ ಬಂದ
ತೋಳದ ಕಥೆ ನೆನಪಿಲ್ಲವೇ?
ಪದೇಪದೇ ಕಿವಿಗೆ ಬಿದ್ದ
ಸನ್ಯಾಸಿಯ ವೇಷ ತೊಟ್ಟು ಬಂದ
ರಾವಣನ ಕತೆ ನೆನಪಿಲ್ಲವೇ?
ಪತ್ರಿಕೆಗಳಲ್ಲಿ ದಿನವೂ ಓದಿದ
ತಂದೆ, ಅಣ್ಣನ ರೂಪ ಧರಿಸಿದ
ಗೋಮುಖವ್ಯಾಘ್ರರ ಕತೆ ನೆನಪಿಲ್ಲವೇ?
ಮುಖವಾಡ ಹೊತ್ತಂತವರ ಮುಂದೆ
ಮುಖವಾಡ ಕಳಚಿದವರ ನೋವು
ಕಾಣುವುದು ಕಡಿಮೆಯೇ?
ಈ ಕಾರಣಕ್ಕೆ ಇರಬಹುದು
ನಾವೆಲ್ಲರೂ ಮುಖವಾಡ ತೊಟ್ಟೇ
ಬದುಕುವುದು! !
ನೋವ ಹುದುಗಿಸಿ
ನಗುವ ಚೆಲ್ಲುತಾ
ಬದುಕಬಯಸುವುದು!!

POEM 69 - ಅಪೂರ್ಣತೆ

ಅಪೂರ್ಣತೆ
ಪ್ರತಿಬಾರಿಯೂ
ನಿನ್ನ ಭೇಟಿಯಾಗಿ ಬಂದಾಗ
ಏನೋ ಅಪೂರ್ಣತೆ
ಮನವ ಕಾಡುತ್ತದೇಕೆ?
ಅಶಾಂತಿ ಆವರಿಸುತ್ತದೇಕೆ?
ನಿನ್ನೊಂದಿಗೆ ಹೆಚ್ಚು ಕಾಲ
ಕಳೆಯಬೇಕೆನ್ನುವ
ಹಂಬಲವಿನ್ನೂ
ಮರೆಯಾಗಿಲ್ಲವೇಕೆ?
ದಿನ ನಿತ್ಯ ಮಾತಾಡಿದರೂ
ಘಂಟೆಗಟ್ಟಲೆ ಹರಟಿದರೂ
ಮುಗಿದಿಲ್ಲ ಮಾತೆಂಬ
ಭಾವ ಮೂಡುತ್ತದೇಕೆ?

ನಿಜ ನೀ ಹೇಳಿದಾ ಮಾತು
ಸಂದೇಹವಿಲ್ಲ ಇದಕೆ.
ಜೀವಂತ ಉಳಿವುದು
ನಮ್ಮ ಸಂಬಂಧ
ಅಪೂರ್ಣತೆಯ ಭಾವ
ಮನದಾಳದಿ ಉಳಿವವರೆಗೆ
.

POEM 68 - ಪುಟ್ಟಿಯ ಕೋಟು

ಪುಟ್ಟಿಯ ಕೋಟು 
     - ಸುಧಾ ಜಿ (ನನ್ನದೇ ಕಥೆ)
ಪುಟ್ಟಿಗೆಂದು ಅಪ್ಪನೊಂದು
ಕೋಟು ತಂದರು
ಅದನು ನೋಡುತಲೇ ಪುಟ್ಟಿ
ಖುಷಿಯ ಪಟ್ಟಳು.

ಶಾಲೆಗೊಂದು ದಿನ ಕೋಟು
ಧರಿಸಿ ಹೋದಳು
ಮಕ್ಕಳೆಲ್ಲ ಅದನು ಕಂಡು
ಭೇಷ್ ಎಂದರು.

ಪುಟ್ಟಿಗೋ ಅದರ ಜೊತೆಗೆ
ಬಂಧ ಬೆಳೆಯಿತು.
ಅವಳು ಎಲ್ಲೊ ಕೋಟು ಅಲ್ಲೆ
ಜೊತೆಗೆ ಉಳಿಯಿತು.

ಆಟ ಆಡುವಾಗಲವಳು
ತೆಗೆಯಲೊಲ್ಲಳು
ಮಲಗುವಾಗ ಕೂಡ ಕೋಟ
ಬಿಚ್ಚಲೊಲ್ಲಳು.

ಸ್ನಾನ ಮಾಡುವಾಗ ತೆಗೆದು
ಧರಿಸಿ ಬಿಡುವಳು
ಯಾವ ಬಟ್ಟೆ ಧರಿಸಿದರೂ
ಕೋಟ ಹಾಕ್ವಳು

ಒಗೆಯಲೆಂದು ಅಮ್ಮ ಅದನು
ಕೊಂಡು ಹೋದರೆ
ಅತ್ತು ಕರೆದು ಸಣ್ಣ ಮುತ್ತು
ಸುರಿಸಿ ಬಿಡುವಳು.

ಹಳೇದಾಯ್ತು, ಬಣ್ಣ ಹೋಯ್ತು
ಕೇಳಲೊಲ್ಲಳು
ಅಲ್ಲಿ ಇಲ್ಲಿ ತೂತು ಬಿತ್ತು
ತೆಗೆಯಲೊಲ್ಲಳು.

ಬೈದು ಅಮ್ಮ ಹೆದರಿಸಿದರು
ಬಗ್ಗಲೊಲ್ಲಳು
ಆಮಿಷ ಆಸೆಗಳಿಗೆ ಅವಳು
ಸಿಕ್ಕಲೊಲ್ಲಳು.

ಹೊಸ ಕೋಟು ಕೊಡುವೆನೆಂದ್ರು
ಜಗ್ಗಲೊಲ್ಲಳು
ಗೊಂಬೆ ಕೊಡುವೆನೆಂದ್ರು
ಅವಳು ಒಪ್ಪಲೊಲ್ಲಳು.

ಮೈಸೂರ್ಪಾಕ್ ಕೊಡುವೆನೆಂದ್ರೆ
ಒಪ್ಪಿಕೊಂಡಳು
ಎರಡೇ ನಿಮಿಷ, ಮತ್ತೆ ತಾನು
ಕೊಡೆನು ಎಂದಳು.

ಕಿತ್ತುಕೊಳಲು ಅಳುವಳಲ್ಲ
ಚಿಂತೆ ಅಮ್ಮಂಗೆ
ಕಸಿದುಕೊಂಡ್ರೆ ನೋಯ್ವಳಲ್ಲ
ನೋವು ಅಪ್ಪಂಗೆ.

ಒಂದು ದಿನ ನರ್ಸ್ ಆಂಟಿ
ಕೋಟು ತೆಗೆದರು
ಮಾಯ ಮಾಡಿ ಮಹಡಿ ಮೇಲೆ 
ಎಸೆದು ಬಿಟ್ಟರು.

ರಂಪ ಅಳುವು ಹಠವು ಎಲ್ಲ
ಶುರೂ ಆಯಿತು
ನಗುವು ಖುಷಿಯು ಅವಳ ಮೊಗದಿ
ಮಾಯವಾಯಿತು..

ನನಗೆ ನನ್ನ ಕೋಟು ಬೇಕು 
ಕೇಳಿಕೊಂಡಳು
ತಂದುಕೊಡಿರಿ ಎಂದೆಲ್ಲರ
ಬೇಡಿಕೊಂಡಳು.

ಸಿಗದು ಎಂದು ತಿಳಿದ ಮೇಲೆ
ಕಣ್ಣೀರಿಟ್ಟಳು
ದುಃಖಿಸುತ್ತ ಹಸಿವಿನಿಂದ
ಮಲಗಿಬಿಟ್ಟಳು.

ಪಕ್ಕದ್ಮನೆ ಆಂಟಿ ಹೃದಯ
ಕರಗಿಹೋಯಿತು
ಮೈಸೂರ್ ಪಾಕು ಆಗಲೇ
ಸಿದ್ಧವಾಯಿತು.

ಕಣ್ಣಿನಿಂದ ಹನಿಗಳೆಲ್ಲ
ಜಾರುತಿದ್ದವು
ಮೈಸೂರ್ ಪಾಕು ಚೂರುಗಳ
ಹೊಟ್ಟೆಗಿಳಿದಿತ್ತು

ಅತ್ತು ಅತ್ತು ಪುಟ್ಟಿ ಅಂದು
ನಿದ್ರೆ ಹೋದಳು
ಎದ್ದ ಕ್ಷಣ ಮತ್ತೆ ಅವಳು
ಕೋಟು ಕೇಳಿದ್ಳು.

ಅಪ್ಪ ಒಂದು ಹೊಸ ಕೋಟು
ತಂದು ಕೊಟ್ಟರು
ಹಳೆಯದನ್ನು ಮರೆತು ಪುಟ್ಟಿ
ಖುಷಿಯ ಪಟ್ಟಳು.
       

POEM 67 - ಒರತೆ

ಒರತೆ
ಪ್ರೀತಿಗಾಗಿ ಆಗ್ರಹಿಸಿದರೆ
ದೊರೆವುದೇನದು?
ಸ್ನೇಹಕಾಗಿ ಹಂಬಲಿಸಿದರೆ
ಸಿಗುವುದೇನದು?
ವಾತ್ಸಲ್ಯಕ್ಕಾಗಿ ಕೊರಗಿದರೆ
ಬರುವುದೇನದು?
ಮಮತೆಗಾಗಿ ಮರುಗಿದರೆ
ನಿಲುಕುವುದೇನದು?
ಸ್ನೇಹ, ಪ್ರೀತಿ, ಮಮತೆ
ಬರುವುದಿಲ್ಲ ಹಾಗೆಯೇ
ನೇಹ, ವಾತ್ಸಲ್ಯದೊರತೆ
ಇರಬೇಕು ನಮ್ಮಲ್ಲಿಯೇ
ಇದ್ದರದು ನಮ್ಮ ಜೊತೆ
ನೀಡಿದರೆ ಇತರರಿಗಾಗಿಯೇ
ತೋರದಾಗ ಪ್ರೀತಿ ಕೊರತೆ
ಸಿಗುವುದು ಸುಲಭವಾಗಿಯೇ

POEM 66 - ಚೇತನ

ಚೇತನ
ಗತಜೀವನದ
ಸಂಕಲೆಯ ಭಾರಕ್ಕೆ
ಕುಗ್ಗಿತ್ತು ಮನ
ಹಳೆಬಾಳಿನಾ
ಕಟ್ಟುಗಳ ವಜನಕ್ಕೆ
ಕುಸಿದಿತ್ತು ಮನ
ಹಿಂದಿನ ಬದುಕಿನ
ಸರಪಳಿಯ ತೂಕಕ್ಕೆ
ಜಗ್ಗಿತ್ತು ಮನ

ಅದಾವುದೋ ಘಳಿಗೆಯಲಿ
ಬಂದ ಚೇತನ
ನೀಡಿತ್ತು ಬಾಳಿಗೆ ಪುನಃಶ್ಚೇತನ
ಸಂಕಲೆಯ ಕಿತ್ತೆಸೆದು
ಸರಪಳಿಯ ಕಡಿದು
ವಜನವಾ ತೊಡೆದು
ಹಗುರಗೊಳಿಸಿತ್ತು ಮನವ
ನಿರಾಳಗೊಳಿಸಿತ್ತು ಭಾವವ
ಮುದಗೊಳಿಸಿತ್ತು ಜೀವವ
.