Thursday, 18 June 2015

POEM 62 - ಬದುಕಿನ ತಿರುವುಗಳು

ಬದುಕಿನ ತಿರುವುಗಳು

ಹದಿಮೂರು ವರ್ಷ ನನಗಾಗ,
ಎಳೆ ಬಾಲೆಯು ನಾನಾಗ?
ಕಳಿಸಿದರು ನನ್ನನ್ನು 
ಕೊಟ್ಟು ಹೊಸ ಬದುಕನ್ನು 
ಗೊತ್ತಿಲ್ಲದ ಪ್ರಪಂಚಕ್ಕೆ
ಅಪರಿಚಿತ ವ್ಯಕ್ತಿಯೊಂದಿಗೆ
ಮದುವೆ ಎಂದರೇನು
ತಿಳಿದಿತ್ತೇನು ನನಗೆ?
ಮನೆ ಹೊಕ್ಕಾಗ ತಿಳಿಯಿತು 
ಎರಡನೆಯವಳು ನಾನೆಂದು.
ಹೇಳಿದರೆ ಅಪ್ಪಾಮ್ಮನಿಗೆ,
ಬೋಧಿಸಿದರು ನನಗೆ -
ಯಾರೂ ಆಗಿಲ್ಲವೇ,
ಎರಡನೇ ಮದುವೆ?
ಹೇಗೊ ಹೊಂದಿಕೊ
ಪತಿ ಪರಮೇಶ್ವರ ಅರಿತುಕೊ.
ಯತ್ನಿಸಿದೆ ಹಾಗೇ ಇರಲು
ಹೊಂದಿಕೊಂಡು ಬಾಳಲು.
ವಿವರಿಸಲಿ ಹೇಗೆ 
ನಾ ಪಟ್ಟ ಪಾಡ
ಅದು ನನ್ನ ವೈರಿಗೂ ಬೇಡ.
ಗಂಡನ ಹಿಂಸೆಯೊಂದು ಕಡೆ
ತೌರಿನ ತಾತ್ಸಾರ ಮತ್ತೊಂದೆಡೆ 
ಈ ರೀತಿ ಬದುಕುವ ಬದಲು
ಹೊರಟೆ ಸಾವಿಗೆ ಶರಣಾಗಲು.
ರೈಲು ಕಂಬಿಯ ಮೇಲೆ
ಮಲಗಬೇಕೆಂದುಕೊಂಡಾಗಲೇ
ಬದುಕಿನ ಆಸೆ ಕರೆದಿತ್ತು
ದೇಹ ರೈಲನ್ನು ಹತ್ತಿತ್ತು.
ಕಾಸಿಲ್ಲದೆ ಕೈಯಲ್ಲಿ
ಕನಸಿರದೆ ಬಾಳಿನಲಿ
ಹಸಿದ ಹೊಟ್ಟೆಯಲಿ
ಮಾಸಿದ ಬಟ್ಟೆಯಲಿ
ತಲುಪಿದ್ದೆ ಗೊತ್ತಿಲ್ಲದೂರಿಗೆ 
ಅಪರಿಚಿತರ ನಾಡಿಗೆ.
ಅವರಿವರ ಕಾಡಿಬೇಡುತ್ತಲೇ
ಹೊಟ್ಟೆ ತುಂಬಿಸುವಾಗಲೇ
ಬಂತೊಂದು ಜೋಡಿ
ಬೆಣ್ಣೆಮಾತಗಳಾಡಿ
ನನ್ನ ಮರುಳುಮಾಡಿ
ಒಯ್ದರು ತಮ್ಮ ಮನೆಗೆ
ಕಾದಿತ್ತಲ್ಲಿ ನರಕ ನನಗೆ 
ಬಿದ್ದಿದ್ದೆ ನಾ ಖಚಿತವಾಗಿ
ಬೆಂಕಿಯಿಂದ ಬಾಣಲೆಗೆ.
ಬಿಟ್ಟಿ ಚಾಕರಿ ಮಾಡುತ್ತಾ 
ತಂಗಳನ್ನವ ತಿನ್ನುತ್ತಾ 
ಹೊಡೆತ, ಬಡೆತ,  
ಅವಮಾನಕ್ಕೆ ಒಳಗಾಗುತ್ತಾ
ಇರಲಾರದೆ ಆ ನರಕದಲ್ಲಿ
ಮತ್ತೆ ನಿಂತೆ ಬೀದಿಯಲ್ಲಿ
ಹೋಗುವುದು ಎಲ್ಲಿ
ಪ್ರಶ್ನೆ ಮೂಡಿತು ಮನದಲ್ಲಿ.
ನಿಂತು ರೈಲು ನಿಲ್ದಾಣದಲ್ಲಿ
ಚಿಂತಿಸುತ್ತಿರುವಾಗ ಅಲ್ಲಿ
ಕಂಡರೋರ್ವ ಸಂತರು
ಹೊಸ ಬದುಕನ್ನು ಕೊಟ್ಟರು.
ದುಡಿವ ಕೈಗೆ ಕೊಟ್ಟು ಕೆಲಸ
ನೊಂದ ಮನಕೆ ನೀಡಿ ಹರುಷ 
ಉತ್ಸಾಹವ ತುಂಬಿದರು
ದಾರಿದೀಪವಾದರು.
ಬೆಳೆದೆ ನಾನು ಅಲ್ಲಿಂದ
ಬಾಳುತಿರುವೆ ಘನತೆಯಿಂದ
ನನ್ನಂತೆ ನೊಂದವರ
ಬಾಳಿನಲಿ ಬೆಂದವರ
ಕಂಬನಿಯ ಒರೆಸಲು
ಶ್ರಮಿಸುತಿರುವೆ ನಿತ್ಯವು.


No comments:

Post a Comment